ಆಶಯ

ಬಾಳ ನೊಗವನು ಹೊತ್ತು

ಜೀವಗಳೊಂದಾಗಿ ಹೋಹುದಕೆ

ವಿಧಿ ಮೇಳೈಸಿಕೊಂಬುತ ಬರುತಿಹದು ಬೆನ್ನ ಹಿಂದೆ

ಸುಖ ದುಃಖದ ಛಡಿಯೇಟುಗಳ ನೀಡಿ

 

 ನೊಗಭಾರ ಮಣಭಾರ ಎಂದುಲಿದು

ನಿಲ್ಲಿಸದೇ ಹೊತ್ತು ನಡೆಯಬೇಕಿದೆ

ಒಡೆಯ ಹೇಳಿದುದಕೆಲ್ಲ ಕೈ ಮುಗಿದು

ಬದುಕು ಬೇಲಿಯ ಸುತ್ತ ಸುತ್ತಬೇಕಿದೆ

 

ನಾಯಕನ ನೇವರಿಕೆಗೆ ಎಂಥಹದು ಪುಳಕ

ಧರ್ಮ ನೀತಿಗಳ ಕಡಿವಾಣದೊಳಗಿದ್ದು

ಕಾಯಕ ಬೆವರಿನಿಂದಲೆ ಈ ಮೈ ಗೆ ಜಳಕ

ಕರ್ಮ ಕೃತಿಗಳ ಹರಿವಾನದೊಳಗಿಂದು

 

ಬದುಕ ತುಂಬೆಲ್ಲ ಇನ್ನೆಂದು ಬರಿ ಉಳುಮೆ

  ಮಣ್ಣ ಕಣ ಕಣಗಳಿಂದ ಸುಖದ ಬೆಳೆ ತರಲು

ಬದುಕ ತುಂಬಲಿ ಎಂದೆಂದೂ ಸಿರಿ ಒಲುಮೆ

ಭಿನ್ನ ಮನಮನಗಳಿಂದ ಒಲವ ಮಳೆ ತರಲು

  

      —-ಸಚಿನ್ ಕುಮಾರ ಬಿ.ಹಿರೇಮಠ

Respond to this post

You must be logged in to post a comment.